Mandya
ಕದಂಬ ಮಯೂರವರ್ಮ,ಇಮ್ಮಡಿ ಪುಲಕೇಶಿ ಪ್ರತಿಮೆ ನಿರ್ಮಾಣಕ್ಕೆ ಆಗ್ರಹ
ಮಂಡ್ಯ: ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿದ ಕದಂಬ ಚಕ್ರವರ್ತಿ ಮಯೂರವರ್ಮ ಹಾಗೂ ಕನ್ನಡ ನಾಡಿನ ಚಕ್ರವರ್ತಿ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ಕದಂಬ ಸೈನ್ಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು.
ರಾಜ್ಯ ಸೈನ್ಯ ಹರಿದು ಹಂಚಿಹೋಗಿದ್ದ ಕನ್ನಡನಾಡನ್ನು ಹಾಗೂ ಕನ್ನಡಿಗರನ್ನು ಶೌರ್ಯ ಪರಾಕ್ರಮಿಗಳಿಂದ ಒಗ್ಗೂಡಿಸಿದ ಕನ್ನಡದ ಪ್ರಥಮ ಸಾಮ್ರಾಜ್ಯ ಕಟ್ಟಿದ, ಕದಂಬ ಮಯೂರವರ್ಮನ ಒಂದು ಪುತ್ಥಳಿ ಕನ್ನಡ ನಾಡಿನಲ್ಲಿ ಇಲ್ಲದಿರುವುದು ನಾಚಿಗೇಡಿನ ಸಂಗತಿ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ರಾಜಧಾನಿ ಆದಿಕವಿ ಪಂಪನ ಪುಣ್ಯಭೂಮಿ ಬನವಾಸಿಯಲ್ಲಿ ಮತ್ತು ವಾಣಿಜ್ಯ ಸಾಂಸ್ಕೃತಿಕ ನಗರ ಶಿರಸಿಯಲ್ಲಿ ಪುತ್ಥಳಿ ಸ್ಥಾಪಿಸಬೇಕು. ನಮಗೆ ಅವಕಾಶ ನೀಡಿದರೆ ಕನ್ನಡಿಗರ ಸಹಕಾರದಿಂದ ನಾವೇ ಪುತ್ಥಳಿ ನಿರ್ಮಾಣ ಮಾಡುತ್ತೇವೆ, ಅದೇ ರೀತಿ ಕೆಚ್ಚೆದೆಯ ಕಟ್ಟಾಳುತನವನ್ನು, ಕನ್ನಡ ತಾಯಿಯ ಕೊಡುಗೆಯನ್ನು ಜಗತ್ತಿಗೆ ಸಾರಿ ಹೇಳಿದ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ, ಉತ್ತರ ಭಾರತ ಸಾಮ್ರಾಟ್ ಹರ್ಷವರ್ಧನನ ಅತಿ ಬೃಹತ್ ಸೈನ್ಯವನ್ನು ಸೋಲಿಸಿ ಪ್ರಪಂಚದಲ್ಲಿ ಕನ್ನಡಿಗರ ಕೀರ್ತಿ ಪತಾಕೆಯನ್ನು ಕ್ರಿ.ಶ. 6ನೇ ಶತಮಾನದಲ್ಲಿ ಎತ್ತಿಹಿಡಿದ ಇಮ್ಮಡಿ ಪುಲಕೇಶಿ ಪುತ್ಥಳಿಯೂ ಇಲ್ಲ ಎಂದು ವಿಷಾದಿಸಿದರು.

ಕನ್ನಡಿಗರ ಉದ್ಯೋಗದ ಕಾಮಧೇನು ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಬಂದರೆ ಆಗ ಕನ್ನಡಿಗರಿಗೆ ಉದ್ಯೋಗದಲ್ಲಿ ಭದ್ರತೆ ಆಗುತ್ತದೆ ಎಂದರು.
ಕದಂಬ ಸೈನ್ಯ ರಾಜ್ಯ ಸಂಚಾಲಕ ಎಸ್.ಶಿವಕುಮಾರ್ ಮಾತನಾಡಿ, ಹಿಂದಿ ಹೇರಿಕೆ ನಿಲ್ಲಿಸಿ, ತ್ರಿಭಾಷಾ ಸೂತ್ರ ರದ್ದಾಗಲಿ. ದ್ವಿಭಾಷಾ ಸೂತ್ರ ರಚನೆ ಆಗುವಂತೆ ಸರ್ಕಾರ ಕ್ರಮ ವಹಿಸಬೇಕು. ಹೊರ ರಾಜ್ಯದ ವಲಸಿಗರನ್ನು ತಡೆಯದಿದ್ದರೆ ಕರ್ನಾಟಕದ ಕನ್ನಡಿಗರಿಗಾಗಿ ಸಿಗಬೇಕಾಗಿದ್ದ ಎಲ್ಲಾ ಉದ್ಯೋಗಗಳು, ಕೃಷಿ ಕಾರ್ಮಿಕ ವ್ಯಾಪಾರ, ವ್ಯವಹಾರಗಳ ಹೊರರಾಜ್ಯದವರ ಕೈಯಲ್ಲಿ ಸಿಕ್ಕಿ ಮುಂದೆ ಕನ್ನಡಿಗರಿಗೆ ಬಾರಿ ಸಂಕಷ್ಟ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

ಸೈನ್ಯದ ರಾಜ್ಯ ಸಂಚಾಲಕ ಬಿ.ಶಿವಕುಮಾರ್ ಮೈಸೂರು, ರಾಜ್ಯ ಸಮಿತಿ ಸದಸ್ಯರಾದ ಆರಾಧ್ಯ ಗುಡಿಗೇನಹಳ್ಳಿ, ಚಿಕ್ಕವೆಂಕಟಪ್ಪ, ರಾಮಣ್ಣ ಇದ್ದರು.
Mandya
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿಯು ಸದೃಢ : ಶಾಸಕ ಹೆಚ್.ಟಿ.ಮಂಜು
ಮಂಡ್ಯ: ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿಯು ಸದೃಢವಾಗಿದ್ದು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಗೌಡ ಅವರು ಎನ್ಡಿಎ ಮೈತ್ರಿಕೂಟದ ಸಂಘರ್ಷಕ್ಕೀಡಾಗುವ ಹೇಳಿಕೆ ನೀಡಬಾರದು ಎಂದು ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಶಾಶ್ವತವಾಗಿ ಮುಂದುವರೆಯಲಿದೆ. ಇದಕ್ಕೆ ಧಕ್ಕಯಾಗುವಂತೆ ಯಾರಾದರೂ ಪ್ರಚೋಧಿಸಿದರೆ ಪ್ರತಿಕ್ರಿಯೆ ನೀಡದಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಆದರೆ ಇತ್ತೀಚೆಗೆ ಪಕ್ಷದ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಕೆ.ಸಿ.ನಾರಾಯಣಗೌಡ ಅವರ ಹೇಳಿಕೆ ಸರಿಯಾದುದಲ್ಲ ಎಂದು ಹೇಳಿದರು.

ಅವರು ಮೈತ್ರಿ ಪಕ್ಷದ ಮುಖಂಡರು, 2013ರಲ್ಲಿ ಜೆಡಿಎಸ್ನಿಂದ ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕರಾದರು, 2018ರಲ್ಲಿ ನಿಖಿಲ್ ಅವರು ರಾಜಕೀಯ ಪ್ರವೇಶ ಮಾಡದಿದ್ದರೂ ಕೆ.ಸಿ.ನಾರಾಯಣಗೌಡ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದರು ಎಂಬುದನ್ನು ಮರೆಯಬಾರದು. ಹೆಚ್.ಡಿ.ದೇವೇಗೌಡರ ಕುಟುಂಬದ ನೆರವಿಲ್ಲದೇ ರಾಜಕೀಯವಾಗಿ ಬೆಳೆಯಲು ಸಾಧ್ಯವಿರಲಿಲ್ಲ.ಅವರು ನಡೆದುಬಂದ ಹಾದಿಯನ್ನು ಮರೆಯಬಾರದು. ಅವರು ಅನುಭವಿ ಹಿರಿಯ ರಾಜಕಾರಣಿಗಳು, ಪದೇ ಪದೇ ಈ ರೀತಿಯ ಹೇಳಿಕೆ ನೀಡಬಾರದು ಎಂದರು.
ಕಳೆದ ಜನವರಿ 16ರಂದು ಗವಿಗಂಗಾಧರಸ್ವಾಮಿ ದೇವಾಲಯದ ಬಳಿ ಕಲ್ಯಾಣಿ ಉದ್ಘಾಟನೆ ವೇಳೆ ತಾವು ತಂದ ಅನುದಾನದಿಂದ ಕಾಮಗಾರಿ ನಡೆದಿದೆ ಎಂದಿದ್ದರು. ಅದಕ್ಕೆ ಸಹಮತ ವ್ಯಕ್ತಪಡಿಸಿ ಕಾಂಗ್ರೆಸ್ ಸರಕಾರದಿಂದ ಅವರ ಅವಧಿಯ ೩೭ ಕೋಟಿ ರೂ.ಗಳ ಅನುದಾನ ಹಿಂಪಡೆಯಲಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದೆ. ಹಿಂದಿನ ಶಾಸಕರು ತಂದ ಅನುದಾನದ ಕಾಮಗಾರಿಗಳಿಗೆ ಹಾಲಿ ಶಾಸಕರು ಚಾಲನೆ ನೀಡುವುದು ವಾಡಿಕೆ ಅದನ್ನು ತಪ್ಪೆಂಬದಂತೆ ಬಿಂಬಿಸಬಾರದೆಂದು ಹೇಳಿದರು.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಮನು ಅವರೊಂದಿಗೆ ೧೫ರಿಂದ ೩೦ ಮಂದಿ ಜೆಡಿಎಸ್ ಸೇರ್ಪಡೆಗೊಂಡರು. ಬಿಜೆಪಿ ಪಕ್ಷದ ಮುಖಂಡರು ನನ್ನ ಮನೆಗೆ ಆಗಮಿಸಿದಾಗ ಸಾಧಾರಣ ಶಾಲು ಹಾಕಿ ಸ್ವಾಗತಿಸಿದೆ. ಇದನ್ನು ಮನೆಗೆ ಬಂದವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಎನ್ಡಿಎ ಮೈತ್ರಿಕೂಟದ ಸದಸ್ಯರಾಗಿ ಕೆಲಸ ಮಾಡಬೇಕು. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು. ಆದರೆ ಕೆ.ಸಿ.ನಾರಾಯಣಗೌಡ ಅವರು ಸಣ್ಣಪುಟ್ಟ ವಿಷಯವನ್ನು ದೊಡ್ಡದು ಮಾಡುತ್ತಿರುವುದು ಸರಿಯಲ್ಲ ಎಂದು ಕಾರವಾಗಿ ನುಡಿದರು.
2028ರ ಚುನಾವಣೆಯ ಸಂಬಂಧ ಅಭ್ಯರ್ಥಿಗಳನ್ನು ಎರಡೂ ಪಕ್ಷಗಳ ವರಿಷ್ಟರು ನಿರ್ಧಾರ ಮಾಡುತ್ತಾರೆ. ಇದನ್ನು ನಾವು ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ. ಈ ಸಂಬಂಧ ನಿಖಿಲ್ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಅವರ್ಯಾರು ಮಾತನಾಡಲು ಎಂದು ಪ್ರಶ್ನಿಸಿರುವುದು ಸರಿಯಲ್ಲ ಎಂದು ತಾಕೀತು ಮಾಡಿದರು.
ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಅವರು ನಿಮ್ಮನ್ನು ಒಮ್ಮೆ ಶಾಸಕ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿದ್ದನ್ನು ಮರೆಯಬಾರದು. ನಿಮಗೆ ಅವರು ಯಾರು ಅಲ್ಲದಿದ್ದರೂ ಜೆಡಿಎಸ್ ಪಕ್ಷಕ್ಕೆ ಅವರು ನಾಯಕರು. ಇದೇ ರೀತಿ ಉದ್ದಟತನ ಮುಂದುವರೆದರೆ ಜೆಡಿಎಸ್ ಪಕ್ಷದಿಂದ ನಿರ್ಧಾರ ಕೈಗೊಂಡು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಕೆ.ಆರ್.ಪೇಟೆ ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಜಿ.ಪಂ ಮಾಜಿ ಸದಸ್ಯ ಮೋಹನ್, ಜೆಡಿಎಸ್ ತಾಲೂಕು ಯುವ ಘಟಕದ ಅಧ್ಯಕ್ಷ ರವಿ, ಮಾದೇವು ಇದ್ದರು.
Mandya
ವಿಜ್ಞಾನ – ತಂತ್ರಜ್ಞಾನದಲ್ಲಿ ಭಾರತ ವಿಶ್ವದ ಗಮನ ಸೆಳೆದಿರುವುದು ಪ್ರಶಂಸನೀಯ: ಶ್ರೀ ಡಾ.ನಿಶ್ಚಲಾನಂದನಾಥಸ್ವಾಮಿ
ಮದ್ದೂರು: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ವಿಶ್ವದ ಗಮನ ಸೆಳೆದಿರುವುದು ಪ್ರಶಂಸನೀಯ ಸಂಗತಿ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಶಿವಪುರದ ಪೂರ್ಣಪ್ರಜ್ಞಾ ಕಾನ್ವೆಂಟ್ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ, 2024-25 ನೇ ಸಾಲಿನ ಸಂಸ್ಥೆಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಹಾಗೂ ವೈದ್ಯಕಿಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ಒಂದು ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ತುಂಬಾ ಹಿಂದೇ ಉಳಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಆದರೆ ಇಂದು ಬಹತೇಕ ದೇಶಗಳಲ್ಲಿ ನಮ್ಮ ದೇಶದ ವಿಜ್ಞಾನಿಗಳೇ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ, ಅಮೇರಿಕಾದಲ್ಲಿ ಶೇ.50 ರಷ್ಟು ವಿಜ್ಞಾನಿಗಳು ನಮ್ಮ ದೇಶದವರೇ ಹಾಗೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಪ್ ಅವರಿಗೆ ವಿಶೇಷ ವೈದ್ಯಕೀಯ ಸಲಹೆಗಾರರಾಗಿರುವುದು ಮಂಡ್ಯದ ಜಿಲ್ಲೆಯ ಹಲ್ಲೆಗೆರೆ ಗ್ರಾಮದ ಡಾ.ವಿವೇಕ್ ಎಂಬುವುದು ಹೆಮ್ಮೆಯ ಸಂಗತಿ ಎಂದರು.
ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ಅವರ ನಿರಂತರ ಶ್ರಮದಿಂದ ಸಂಸ್ಥೆಯು ಅತ್ಯುತ್ತಮವಾಗಿ ನಡೆಯುತ್ತಿದ್ದು, ಪ್ರತಿ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿಯಾ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ರಾಜ್ಯದ ಗಮನ ಸೆಳೆಯುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದ ಬೆಂಗಳೂರು ಇಸ್ರೋ ಡೆಪ್ಯೂಟಿ ಡೆರಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದ ಋಷಿಮುನಿಗಳೇ ಭಾರತದ ವಿಜ್ಞಾನಿಗಳಾಗಿದ್ದರು. ಮಹಾಭಾರತದ ಕಾಲದಲ್ಲಿಯೇ ಗ್ರಹಗತಿಗಳು ಹೇಗೆ ಸಂಭವಿಸುತ್ತವೆ. ಪಂಚಾಂಗದಿಂದ ಯಾವಾಗ ಒಳ್ಳೆಯ ದಿನಗಳು ಬರುತ್ತವೆ ಎಂಬುದನ್ನು ತಪಸ್ಸು, ಜ್ಞಾನವೇ ಇಂದು ವಿಜ್ಞಾನ ಮತ್ತು ತಂತ್ರಜ್ಞಾನವಾಗಿದೆ ಎಂದು ತಿಳಿಸಿದರು.
1972 ರಲ್ಲಿ ದೇಶದಲ್ಲಿ ಇಸ್ರೋ ಸಂಸ್ಥೆ ಸ್ಥಾಪನೆಯಾಯಿತು. ಕೇವಲ 3 ವರ್ಷಗಳಲ್ಲೆ ಆರ್ಯಭಟ ಎಂಬ ಸ್ಯಾಟಲೈಟ್ ಅನ್ನು ಪ್ರಪಥಮ ಭಾರಿಗೆ ಅತ್ಯಂತ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಎಂದರು.
30 ವರ್ಷಗಳ ಮುಂಚೆಯೇ ಅಮೇರಿಕಾ ದೇಶ ಚಂದ್ರಯಾನಕ್ಕೆ ಹೋಗಿತ್ತು. ಆದರೆ, ಚಂದ್ರಯಾನದಲ್ಲಿ ನೀರಿದೆ ಅಂತ ಪತ್ತೆ ಹಚ್ಚಿದ್ದು, ನಮ್ಮ ದೇಶ ಎಂದರು. ಮಂಗಳಯಾನಕ್ಕೆ ಹೋಗಲು ಅಮೇರಿಕಾ ದೇಶ 4 ಬಾರಿ ಪ್ರಯತ್ನ ಮಾಡಿ 5 ನೇ ಬಾರಿಗೆ ಯಶಸ್ವಿಯಾಗಿದ್ದಾರೆ. ರಷ್ಯಾ 3 ಬಾರಿ ಪ್ರಯತ್ನ ಮಾಡಿ 4 ನೇ ಬಾರಿಗೆ ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ದೇಶ ಪ್ರಪಥಮ ಬಾರಿಗೆ ಮಂಗಳಯಾನವನ್ನು ಅತ್ಯಂತ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಚಂದ್ರಯಾನ – 3 ರಲ್ಲೂ ಸಹ ಯಶಸ್ವಿಯಾಗಿದ್ದು, ಈ ದೇಶದ ಘನತೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ – ವಿಚಾರಗಳನ್ನು ಶ್ರದ್ದೆಯಿಂದ ಕಲಿಸಬೇಕು. ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಆಹಾರ ಪದ್ದತಿ, ಮನುಷ್ಯರ ಜೀವನ ಶೈಲಿಯನ್ನು ಶಿಕ್ಷಣದ ಜತೆಗೆ ಕಲಿಸಬೇಕು ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ವಿದ್ಯಾಥರ್ಿಗಳಿಗೆ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಕ ಕೊಡುವ ಜತೆಗೆ ಶಿಸ್ತು, ಸಂಸ್ಕಾರ, ಗುರು, ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಕಲಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದರು.
ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆ, ಸೃಜನಶೀಲತೆ ಮತ್ತು ವಾಣಿಜ್ಯ ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿದೆ. ಸಂಸ್ಕೃತಿ, ಕಲೆ, ವಿಜ್ಞಾನ ಹಾಗೂ ಇತಿಹಾಸವನ್ನು ಪರಿಣಾಮಕಾರಿ ತಿಳಿಸುತ್ತದೆ. ಆದ್ದರಿಂದ ವಿಜ್ಞಾನ ವಸ್ತು ಪ್ರದರ್ಶನಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂದು ತಿಳಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ 750 ಕ್ಕೂ ಹೆಚ್ಚು ವಿವಿಧ ಮಾದರಿ ತಯಾರಿಸಿಕೊಡು ಬಂದು ಅದರ ಬಗ್ಗೆ ಸಂಪೂರ್ಣವಾಗಿ ವಿವರ ನೀಡಿದ್ದು, ಗಣ್ಯರ ಹಾಗೂ ಪಾಲಕರ ಗಮನ ಸೆಳೆಯಿತು.
ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ, ಬಿಇಒ ಎಸ್.ಬಿ.ಧನಂಜಯ, ನಿವೃತ್ತ ಬಿಇಒ ಮರಿಗೌಡ, ನಿವೃತ್ತ ಮುಖ್ಯ ಅಭಿಯಂತರ ಎಸ್.ವಿ.ರಮೇಶ್, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಪಿ.ನಾಗೇಶ್, ಉಪನ್ಯಾಸಕರಾದ ಎಂ.ರಾಜೇಂದ್ರ, ಜಿ.ಎನ್.ಪುಟ್ಟರಾಜು ಇತರರಿದ್ದರು.
Mandya
ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ತರಬೇತಿ ಪಡೆದ ವಿಟಿಯು ತಂಡದ ಐತಿಹಾಸಿಕ ಸಾಧನೆ — ರನ್ನರ್ಸ್-ಅಪ್, ಅಖಿಲ ಭಾರತ ಸ್ಪರ್ಧೆಗೆ ಆಯ್ಕೆ
ಮಂಡ್ಯ : ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿ.ಟಿ.ಯು.), ಬೆಳಗಾವಿ, ಕರ್ನಾಟಕದ ಪುರುಷರ ಕ್ರಿಕೆಟ್ ತಂಡವು ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ, ಮೈಸೂರಿನ ಜೆಎಸ್ಎಸ್ ಸೈನ್ಸ್ ಅಂಡ್ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ದಿನಾಂಕ 27 ಜನವರಿ 2026 ರಿಂದ 5 ಫೆಬ್ರವರಿ 2026 ರವರೆಗೆ ಆಯೋಜಿಸಲಾದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಕ್ರಿಕೆಟ್ ಪಂದ್ಯಾವಳಿ 2025–26ರಲ್ಲಿ ರನ್ನರ್ಸ್-ಅಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದೆ.
ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ಪಿ.ಟಿ. ಕ್ರೀಡಾ ಸಮುಚ್ಚಯದಲ್ಲಿ ನಡೆದ ಉತ್ತಮ ಯೋಜಿತ ಆಯ್ಕೆ ಪ್ರಕ್ರಿಯೆ ಮತ್ತು ತೀವ್ರ ತರಬೇತಿ ಶಿಬಿರವು ತಂಡದ ದೈಹಿಕ ಸಾಮರ್ಥ್ಯ ಹಾಗೂ ಸ್ಪರ್ಧಾತ್ಮಕ ಸಿದ್ಧತೆಯನ್ನು ಗಮನಾರ್ಹವಾಗಿ ಬಲಪಡಿಸಿತು. ಈ ಸಿದ್ಧತೆಯ ಫಲವಾಗಿ ಟೂರ್ನಿಯ ಪಯಣದಲ್ಲಿ ವಿಟಿಯು ತಂಡವು ಸರಣಿ ಗೆಲುವುಗಳ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.

ಮೊದಲ ಪಂದ್ಯದಲ್ಲಿ ವಿಗ್ನಾನ್ ವಿಶ್ವವಿದ್ಯಾನಿಲಯ ವಿರುದ್ಧ 80 ರನ್ ಗುರಿಯನ್ನು 8.2 ಓವರ್ಗಳಲ್ಲಿ ಬೆನ್ನಟ್ಟಿಸಿ 8 ವಿಕೆಟ್ಗಳ ಜಯ ಸಾಧಿಸಿತು. ನಂತರ ಪುದುಚೇರಿ ತಾಂತ್ರಿಕ ವಿಶ್ವವಿದ್ಯಾನಿಲಯ ವಿರುದ್ಧ 7 ವಿಕೆಟ್, ಮಲ್ಲಾ ರೆಡ್ಡಿ ವಿಶ್ವವಿದ್ಯಾನಿಲಯ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಮದುರೈ ಕಾಮರಾಜ್ ವಿಶ್ವವಿದ್ಯಾನಿಲಯ ವಿರುದ್ಧ 44 ರನ್ಗಳ ಅಂತರದಿಂದ ಗೆಲುವು ಸಾಧಿಸಿತು.
ಮುಂದಿನ ಪಂದ್ಯದಲ್ಲಿ ಸಿಎಂಆರ್ ವಿಶ್ವವಿದ್ಯಾನಿಲಯ ವಿರುದ್ಧ 150 ರನ್ ಗುರಿಯನ್ನು ರೋಚಕವಾಗಿ ಬೆನ್ನಟ್ಟಿಸಿ 3 ವಿಕೆಟ್ ಜಯ ದಾಖಲಿಸಿತು. ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಜೆಪ್ಪಿಯಾರ್ ವಿಶ್ವವಿದ್ಯಾನಿಲಯ ವಿರುದ್ಧ 9 ವಿಕೆಟ್ ಜಯ ಸಾಧಿಸಿತು. ಸೆಮಿಫೈನಲ್ನಲ್ಲಿ ಅನ್ನಾ ವಿಶ್ವವಿದ್ಯಾನಿಲಯ ವಿರುದ್ಧ 6 ವಿಕೆಟ್ಗಳ ಗೆಲುವು ಪಡೆದು ಫೈನಲ್ಗೆ ಪ್ರವೇಶಿಸಿತು.

ಅಂತಿಮ ಪಂದ್ಯದಲ್ಲಿ ವಿಟಿಯು ತಂಡವು ಒಸ್ಮಾನಿಯಾ ವಿಶ್ವವಿದ್ಯಾನಿಲಯ ವಿರುದ್ಧ ಹೋರಾಟಮಯ ಪ್ರದರ್ಶನ ನೀಡಿದರೂ, ಗುರಿಯನ್ನು ಸಮೀಪಿಸಿ ರನ್ನರ್ಸ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ತಂಡದ ಈ ಪ್ರದರ್ಶನ ಅಧಿಕಾರಿಗಳು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.
ಈ ಸಾಧನೆ ವಿಟಿಯು ಕ್ರೀಡಾ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿ ಗುರುತಿಸಲಾಗಿದೆ.

ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ಪಿ.ಟಿ. ಕ್ರೀಡಾ ಸಮುಚ್ಚಯದಲ್ಲಿ ತರಬೇತಿ ಪಡೆದು ಇದೇ ಮೊದಲ ಬಾರಿ ಫೈನಲ್ ಹಂತಕ್ಕೆ ತಲುಪಿದ ವಿಟಿಯು ತಂಡವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಎಸ್. ವಿಜಯ್ ಆನಂದ್ ಅವರು ಅಭಿನಂದಿಸಿ, ಮುಂದಿನ ಪಂದ್ಯಾವಳಿಗಳಿಗೆ ಶುಭಾಶಯಗಳನ್ನು ಕೋರಿದರು.
ಇನ್ನಷ್ಟು ಹೆಮ್ಮೆಯ ವಿಷಯವೆಂದರೆ, ಈ ಸಾಧನೆಯ ಹಿನ್ನೆಲೆ ತಂಡವು ಈಗ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಂತರ್ ವಲಯ ಕ್ರಿಕೆಟ್ ಸ್ಪರ್ಧೆ 2025–26ರಲ್ಲಿ ಭಾಗವಹಿಸಲು ಆಯ್ಕೆಯಾಗಿದೆ. ಈ ಸ್ಪರ್ಧೆ ಗುಜರಾತಿನ ಸೌರಾಷ್ಟ್ರ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 8ರಿಂದ 14, 2026ರವರೆಗೆ ನಡೆಯಲಿದೆ. ಈ ಆಯ್ಕೆ ವಿಟಿಯು ಕ್ರಿಕೆಟ್ನ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಭವಿಷ್ಯದ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.
-
Chamarajanagar14 hours agoಬಿಳಿಗಿರಿ ರಂಗನಬೆಟ್ಟದ ದೇವಾಲಯ ಸುತ್ತಮುತ್ತ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ
-
National6 hours agoU-19 World Cup| ವೈಭವ್ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
-
National - International7 hours agoನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
-
State8 hours agoಬಿಗ್ ಬಾಸ್-12 ವಿನ್ನರ್ ಗಿಲ್ಲಿನಟ ವಿರುದ್ದ ಫಿಲ್ಮ್ ಚೇಂಬರ್ಗೆ ದೂರು
-
Mysore9 hours agoವಿಶ್ವಕರ್ಮ ಯೋಜನೆಯಡಿ ವಸ್ತು ಪ್ರದರ್ಶನ
-
State10 hours agoನಮ್ಮ ಪಕ್ಷದ ಹೈಕಮಾಂಡ್ ಡಾ.ಯತೀಂದ್ರ ಅವರೇ: ಡಿಸಿಎಂ ಡಿಕೆಶಿ ಟಾಂಗ್
-
National10 hours agoಮಹಿಳೆಯ ಇಚ್ಛೆಗೆ ವಿರುದ್ಧವಾಗಿ ತಾಯಿಯಾಗುವಂತೆ ನ್ಯಾಯಾಂಗ ಆಗ್ರಹಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
-
Mysore11 hours agoವಕೀಲರ ಸಂಘದ ಅಧ್ಯಕ್ಷರ ಮೇಲೆ ಪ್ರಕರಣ: ವಕೀಲ ಸಂಘದಿಂದ ಪ್ರತಿಭಟನೆ
